ಗೋಕರ್ಣ ಆಂದ್ಲೆ ಜಗದೇಶ್ವರಿ ದೇವಾಲಯಗಳಲ್ಲಿ ಡಿಕೆಶಿ ವಿಶೇಷ ಪೂಜೆ!

ರಾಜ್ಯ

ಉತ್ತರ ಕನ್ನಡ- ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (ಡಿಕೆಶಿ) ಆತ್ಮಲಿಂಗ ಸ್ಪರ್ಶ ಪೂಜೆ ನೆರವೇರಿಸಿದರು. ಹಿರಿಯ ಪುರೋಹಿತರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

ಗೋಕರ್ಣ ಪೂಜೆ ನಂತರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದ ಜಗದೇಶ್ವರಿ ದೇವಾಲಯಕ್ಕೆ ಡಿಕೆಶಿ ಭೇಟಿ ನೀಡಿದರು. ದೇವಾಲಯಕ್ಕೆ ಆಗಮಿಸಿದ ವೇಳೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು “ಮುಂದಿನ ಮುಖ್ಯಮಂತ್ರಿ ಡಿಕೆಶಿ” ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಘೋಷಣೆ ಬೇಡ ಎಂದು ಕೈ ಸನ್ನೆ ಮೂಲಕ ಮನವಿ ಮಾಡಿದರು.

ನಂತರ ಸಂಪ್ರದಾಯದಂತೆ ದೇವಾಲಯದ ಒಳಗೆ ಪ್ರವೇಶಿಸಿದ ಡಿಕೆಶಿ, ದೇವಿಯಲ್ಲಿ ಪ್ರಶ್ನೆ ಹಾಕುವ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಈ ಪೂಜೆ ಮತ್ತು ದೇವರ ಪ್ರಶ್ನೆ ಪ್ರಕ್ರಿಯೆ ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆಯಲಿದೆ. ಪೂಜೆ ನಡೆಯುವ ಅವಧಿಯಲ್ಲಿ ದೇವಾಲಯದ ಒಳಗೆ ಡಿಕೆಶಿ ಹೊರತುಪಡಿಸಿ ಇತರರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ.

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದೇವರ ಆಶೀರ್ವಾದ ಪಡೆಯುತ್ತಿರುವ ಡಿಕೆಶಿಯ ಭೇಟಿಗೆ ಸ್ಥಳೀಯವಾಗಿ ಹೆಚ್ಚಿನ ಗಮನ ಸೆಳೆಯಿತು.